ಜಯಂತ ಕಾನಿಟಕರ್ ಶ್ಯಾಮಸುಂದರ ಮತ್ತು ಇತರ ಆಪ್ತರೊಡನೆ ಮಾತನಾಡುತ್ತ ಕುಳಿತಿದ್ದ. ಸೆಕ್ರಟರಿ ಬಂದು ತಮ್ಮ ಭೇಟಿಗೆ ಯಾರೊ ಬಂದಿದ್ದಾರೆ ಎಂದು ಹೇಳಿದಾಗ ಅವರನ್ನು ಕಳಿಸು ಎಂದು ಹೇಳಿಕಳಿಸಿದ. ಓರ್ವ ಯುವತಿ ವೃದ್ಧರೊಡನೆ ಒಳಗೆ ಬಂದಳು. ಜಯಂತ ’ ಬನ್ನಿ ಕುಳಿತುಕೊಳ್ಳಿ , ರೇಚಲ್ ಅಲ್ಲವೆ? ದಯಾನಂದ ಪೋನ್ ಮಾಡಿದ್ದರು. ಏನು ವಿಷ್ಯ ? ಏನಾಗಬೇಕು? ಎಂದು ಕೇಳಿದ. ಆಕೆ ಜೊತೆಯ ವೃದ್ಧರೊಡನೆ ಕುಳಿತುಕೊಳ್ಳುತ್ತ ಹೇಳಿದಳು ’ ನಮಸ್ಕಾರ. ಹೌದು ನಾನೇ ರೇಚಲ್ . ಇವರು ನನ್ನ ತಂದೆ ಶಿರೀಲ್ ಟೇಲರ ಅಂತ. ನಮ್ಮ ತಂದೆ ಫರ್ನಿಚರ್ ಕೆಲಸ ಮಾಡುತ್ತಾರೆ. ನಾವು ಅಷ್ಟೇನೂ ಅನುಕೂಲವಂತರಲ್ಲ; ಚಂದೂರಿನ ನವನಗರದಲ್ಲಿ ಒಂದು ಸೈಟ್ ತೆಗೆದುಕೊಂಡಿದ್ದೆವು.. ಅದನ್ನು ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಕಾರಕ್ಕೆ ಕೊಡುವ ಶುಲ್ಕದಷ್ಟೇ ಹಣವನ್ನು ಲಂಚವಾಗಿಯೂ ಕೊಡಬೇಕೆಂದು ಮೀಡಿಯೇಟರ್ ಹೇಳಿದ ಪ್ರಕಾರ ಅದನ್ನೂ ಕೊಟ್ಟು ನೋಂದಣಿಯನ್ನೇನೊ ಮಾಡಿಕೊಂಡೆವು ..ಎಂದು ಸ್ವಲ್ಪ ನಿಲ್ಲಿಸಿ, ಮುಂದರಿಸಿದಳು. ’ಈಗ ಒಂದು ವರ್ಷದಿಂದ ಅಲೆಯುತ್ತಾ ಇದ್ದೇವೆ. ಎಂಟ್ರಿ ಮಾಡಿಕೊಡ್ತಾ ಇಲ್ಲ ಎಲ್ಲಿಯೊ ನೂರಾರು ರೂಪಾಯಿ ಲಂಚ ಕೇಳಿದರೆ ಹೋಗಲಿ ಎಂದು ಕೊಡಬಹುದಿತ್ತು. ಎಂಟ್ರಿಗೂ ಇಪ್ಪತ್ತೈದು ಸಾವಿರ ಕೊಡಬೇಕು ಎಂದರೆ ನಾವೆಲ್ಲಿಂದ ಕೊಡೋದು ಸಾರ್.ಈಗಾಗಲೇ ಸೈಟಿಗಾಗಿ ಮೈತುಂಬ ಸಾಲ ಮಾಡಿಕೊಂಡು ಕಂತು ಕಟ್ಟಲಾಗದೆ ಊಟಕ್ಕೂ ತತ್ವಾರ ಆಗಿ ದಿನ ಕಳೆಯುತ್ತಿದ್ದೇವೆ.ರಿದನ್ನೆಲ್ಲ ಯಾರತ್ರ ಹೇಳಿಕೊಳ್ಳೋದು ಸಾರ್? ಗ್ರಾಮೋದಯ ಬಳಗದ ದಯಾನಂದ ಅವರು ನಿಮ್ಮನ್ನು ಕಾಣಿ, ಲಂಚವಿಲ್ಲದೆ ಕೆಲಸ ಮಾಡಿಸಿಕೊಡುತ್ತಾರೆ ಅಂತ ಹೇಳಿದರು..ಅದಕ್ಕೇ ಬಂದಿದ್ದೇವೆ ..
’ಎಂಟ್ರಿಗೆ ಯಾರು ಯಾರಿಗೆ ಲಂಚ ಕೊಡಬೇಕಂತೆ? ಇದನ್ನು ಕೊಡಬೇಕು ಎಂದು ಯಾರು ಹೇಳಿದರು?
ಅಸಿಸ್ಟಂಟ ಕಮಿಶನರ್ ವರೆಗೆ ಕೊಡಬೇಕಾಗುತ್ತಂತೆ. ಸರ್ಕಲ್ ಇನ್ಸ್ಪೆಕ್ಟರ್, ಶ್ಯಾನುಭೋಗರು ಇಬ್ಬರೂ ಹೇಳಿದರು..
’ಆಯ್ತು ನಾವು ಹೋಗಿ ಅಸಿಸ್ಟಂಟ ಕಮಿಶನರನ್ನೇ ಭೇಟಿಯಾಗಿ ನೋಡುತ್ತೇವೆ.. ಮಾಡಿಕೊಡದೇ ಇದ್ದರೆ ಅಲ್ಲಿಯೇ ಧರಣಿ ಕುಳಿತು ಕೊಳ್ಳೋಣ,ನೀವೂ ಇರಬೇಕಾಗುತ್ತೆ..
’ಇರ್ತೀವಿ ಸಾರ್, ಇದಿಷ್ಟೇ ಅಲ್ಲ ಅವರು ನಗರ ಸಭೆ ಎನ್ ಓಸಿ, ಇನ್ ಕಂ ಸರ್ಟಿಫಿಕೇಟು, ಮಂಜೂರಾದ ಸಿಟಿ ಮ್ಯಾಪ್ ಸರ್ಟಿಫೈಡ್ ಕಾಪಿ ಎಲ್ಲಾ ಬೇಕು ಅಂದಿದ್ದಾರೆ ಅದೂ ಸಿಗ್ತಾ ಇಲ್ಲ..ಸಾವಿರ ಗಟ್ಟಳೆ ಲಂಚ ಕೇಳ್ತಿದ್ದಾರೆ..
’ಹೌದು ಎಲ್ಲ ಕಡೆಗೂ ಲಂಚ ತುಂಬಿ ಹೋಗಿದೆ.. ಲಂಚ ಇಲ್ಲದೆ ಕೆಲಸ ಇಲ್ಲ.. ಸರಕಾರದ ಪಗಾರು ಬೇರೆ ಗುಳುಂ ಗಳುಂ ಲಂಚ ಬೇರೆ..’
’ಬಡವರು, ಮಧ್ಯಮವರ್ಗದವರು ಹೇಗೆ ಬದುಕಬೇಕು ಹೇಳಿ ? ..
’ಇದನ್ನೆಲ್ಲ ಕಂಡು ರೋಸಿ ಹೋಗಿಯೇ ನಾವೊಂದು ಇದರ ವಿರುದ್ಧ ತಂಡ ರಚಿಸಿಕೊಂಡಿದ್ದೇವೆ.. ಬಡವರಿಗೆ ಶೋಷಿತರಿಗೆ ನೆರವಾಗೋದೇ ನಮ್ಮ ಧ್ಯೇಯ.. ನಮ್ಮ ಪ್ರಜಾ ಸೇವಾ ಬಡವರಿಗೆ, ಕೈಲಾಗದವರಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನೂ ಲಂಚವಿಲ್ಲದೇ ಒದಗಿಸಿಕೊಡಲು ಪ್ರಯತ್ನಿಸುತ್ತದೆ..
ನಾಳೆ ಚಂದೂರಿಗೆ ಬರುತ್ತೇವೆ.. ನಿಮ್ಮ ಕೆಲಸ ಆಯಿತೆಂದೇ ತಿಳಿಯಿರಿ’ ಎಂದ ಜಯಂತ..
’ತುಂಬಾ ಉಪಕಾರ ಆಯ್ತು.. ಎಂದು ಕೈಮುಗಿದು ತಂದೆಯೊಂದಿಗೆ ರೇಚಲ್ ಅಲ್ಲಿಂದ ಹೊರಟಳು..
ಮರುದಿನ ಸರಿಯಾದ ಸಮಯಕ್ಕೆ ಜಯಂತ ಶ್ಯಾಮಸುಂದರ್ ಜೊತೆ ಅಸಿಸ್ಟಂಟ ಕಮಿಶನರ್ Pಚೇರಿ ಹತ್ತಿರ ಬಂದ. ರೇಚಲ್ ತಂದೆಯೊಂದಿಗೆ ಕಾದಿದ್ದಳು. ಅವರನ್ನು ಕರೆದುಕೊಂಡು ಏ ಸಿ ಅವರನ್ನು ಭೇಟಿಯಾಗಿ ಸಂಗತಿಯನ್ನು ವಿವರಿಸಿ ತಕ್ಷಣ ಕೆಲಸ ಮಾಡಿಕೊಬೇಕೆಂದು ಆಗ್ರಹಿಸಿದ. ಪ್ರಜಾ ಸೇವಾದ ಶಕ್ತಿಯನ್ನು ಅರಿತಿದ್ದ ಏಸಿ ಕೂಡಲೇ ಕೇಸ್ ವರ್ಕರ್ ಕರೆದು ಮಂಜೂರಿ ಹಾಕಿ ಸೈಟಿನ ಎಂಟ್ರಿ ಮಾಡಿಕೊಡುವಂತೆ ತಹಸಿಲ್ದಾರ್ ಕಚೇರಿಗೆ ಆರ್ಡರ್ ಕಳಿಸುವಂತೆ ಸೂಚಿಸಿದರು. ಅದಕ್ಕೆ ಬೇಕಾದ ಇತರ ಕಾಗದ ಪತ್ರಗಳ ಕೆಲಸವನ್ನು ಶ್ಯಾಮಸುಂದರ್ ರನ್ನು ಕಳಿಸಿ ಪೂರಯಿಸಿಸಿ ಕೊಟ್ಟಾಗ ರೇಚಲ್ ಮತ್ತು ಅವಳ ತಂದೆ ಶಿರಿಲ್ ಟೇಲರ್ ಸಮಾಧಾನದ ನಿಟ್ಟುಸಿರೆಳೆದರು. ಅವರಿಗೆ ತುಂಬ ಸಂತೋಷವಾಯಿತು. ಲಂಚವಿಲ್ಲದೆ ಅವರ ಕೆಲಸ ಆಗಿತ್ತು. ಹೀಗೆ ಪರಿಚಯವಾದ ಜಯಂತ ಕಾನಿಟಕರ್ ರೇಚಲ್ ಗೆ ಆರಾಧ್ಯ ಪುರುಷನೇ ಆಗಿಬಿಟ್ಟ. ಕಾನಿಟಕರ್ ಟೀಮಿನ ಸೇವಾ ಕಾರ್ಯಕ್ರಮಗಳಿಂದ ಪ್ರಭಾವಿತಳಾದ ಆಕೆಯೂ ಕೆಲವೇ ದಿನಗಳಲ್ಲಿ ಪ್ರಜಾ ಸೇವಾ ದ ಸಕ್ರಿಯ ಕಾರ್ಯ ಕರ್ತೆಯಾಗಿ ಜಯಂತನ ಟೀಮು ಸೇರಿದ್ದಳು.
ಇಡೀ ದೇಶದಲ್ಲಿ ಒಂದು ಡೆಪಾರ್ಟಮೆಂಟನ್ನೂ ಬಿಡದೆ ವ್ಯಾಪಿಸಿದ ಭ್ರಷ್ಟಾಚಾರದಿಂದ ರೋಸಿ ಹೋದ ಜಯಂತ ಕಾನಿಟಕರ ರಾಜಧಾನಿ ಆನಂದ ಪುರದಲ್ಲಿ ತನ್ನ ಸಮಾನ ಮನಸ್ಕ ಸ್ನೇಹಿತರೊಂದಿಗೆ ಪ್ರಜಾ ಸೇವಾ ಸಂಘವನ್ನು ಕಟ್ಟಿದ್ದ. ಬಡವರು, ಶೋಷಿತರು, ಮಹಿಳೆಯರು ಹೀಗೆ ನ್ಯಾಯವತ್ತಾದ ಕೆಲಸಕ್ಕಾಗಿ ಸಹಾಯ ಕೇಳಿ ಬಂದವರಿಗೆ ಲಂಚವಿಲ್ಲದೆ ಕೆಲಸ ಮಾಡಿಕೊಡುವುದು, ಸರಕಾರದ ಎಲ್ಲ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಿಕೊಡುವುದು ಅವರ ಕೆಲಸವಾಗಿತ್ತು. ಯಾವುದೇ ಅಧಿಕಾರಿ ಲಂಚ ಕೇಳಿದರೆ ಮಾಧ್ಯಮ ದವರೆದುರು ಅವನನ್ನು ನಿಲ್ಲಿಸಲಾಗುತ್ತಿತ್ತು. ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯ ತರಲಾಗುತ್ತಿತ್ತು. ಆಗಲೂ ಕೆಲಸ ಆಗದಿದ್ದರೆ ಧರಣಿ ಸತ್ಯಾಗ್ರಹ, ಅಗತ್ಯ ಬಿದ್ದರೆ ಕೋರ್ಟಿನ ಮೊರೆ ಹೊಗುವುದು ಹೀಗೆ ಎಲ್ಲ ದಿಕ್ಕಿನಿಂದಲೂ ಬೆನ್ನು ಬೀಳುತ್ತಿದ್ದರು. ಇದರಿಂದಾಗಿ ಪ್ರಜಾ ಸೇವಾ-ಕಾನಿಟಕರ್ ಟೀಮು ಎಂದೊಡನೆ ಲಂಚವಿಲ್ಲದೆ ಸಲೀಸಾಗಿ ಕೆಲಸ ಆಗ ಹತ್ತಿತು.. ನಾಡಿಗೆ ನಾಡೇ ಇಂತಹ ಒಂದು ಸಂಘಟನೆಯಿಂದಾಗಿ ಸಂತಸಗೊಂಡಿತ್ತು. ಭ್ರಷ್ಟಾಚಾರದಿಂದ ರೋಸಿ ಹೋದ ಜನತೆ ಕೂಡ ತನು ಮನ ಧನಗಳಿಂದ ಪ್ರಜಾಸೇವಾಕ್ಕೆ ಬೆಂಬಲವಾಗಿ ನಿಂತಿತ್ತು. ಇಂತಹ ತಳ ಮಟ್ಟದ ಕೆಲಸ ಕರ್ಯಗಳನ್ನು ಸೇವಾ ಮನೋಭಾವದಿಮದ ಮಾಡಿಕೊಡುತ್ತ ರಾಷ್ಟ್ರಮಟ್ಟದಲ್ಲಿ ಬೆಳೆದ ಕಾನಿಟಕರ್ ಟೀಮು ಮತ್ತವರ ಪ್ರಜಾಸೇವಾ ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ವಿಫಲಗೊಳಸಲು ವೈರಿಗಳೂ ಸಹ ದೊಡ್ಡರೀತಿಯಲ್ಲಿ ಫಿತೂರಿ ನಡೆಸಿಯೇ ಇದ್ದರು. ಒಬ್ಬೊಬ್ಬರಾಗಿ ಪ್ರಜಾ ಸೇವಾದ ಚಟುವಟಿಕೆಯಿಂದ ಹಿಂದೆ ಸರಿಯುವಂತೆ ಮಾಡುವುದು, ಅದಕ್ಕೆ ಒಪ್ಪದಾಗ ಗೊತ್ತಾಗದ ಹಾಗೆ ಅವರನ್ನೇ ಮುಗಿಸಿಬಿಡುವುದು ಎಂಬುದಾಗಿ ಸಂಚನ್ನೂ ರೂಪಿಸಿದ್ದರು.
ಅದರ ಫಲವಾಗಿಯೇ ಸ್ವಾಮಿ ಚಿದಂಬರೇಶ ಅವರು ನ್ಯೂಟ್ರಲ್ ಆಗುವಂತೆ ಮಾಡಲಾಗಿತ್ತು. ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಸ್ವಾಮಿ ಚಿದಂಬರೇಶ ಮತ್ತು ಅವರ ಅನುಯಾಯಿಗಳು ಇದರಿಂದ ಹಿಂದೆ ಸರಿದಿದ್ದರು. ಜಯಂತ ಕಾನಿಟಕರ್ ಟೀಮಿನೊಂದಿಗೆ ಒಂದಿಲ್ಲೊಂದು ರೀತಿಯಿಂದ ಕೈಜೋಡಿಸುತ್ತಿದ್ದ ಸ್ವಾಮಿ ಚಿದಂಬರೇಶ ಮತ್ತು ಅವರ ಅನುಯಾಯಿಗಳು ಯಾರೂ ಇತ್ತೀಚೆಗೆ ಅವರ ಸಭೆಗಳಿಗೆ ಬರುತ್ತಿರಲಿಲ್ಲ. ಪಾರ್ಲಿಮೆಂಟ ಭವನದ ಎದುರು ನಡೆಯುವ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದ ಅವರು ಹಿಂದೆ ಸರಿದ ಸಂಗತಿಯನ್ನು ಪತ್ರಿಕೆಯಲ್ಲಿ ಓದಿ ಜಯಂತ ಚಕಿತನಾಗಿದ್ದ. ಯಾವುದಕ್ಕೂ ಅವರನ್ನು ಭೆಟ್ಟಿಯಾಗಿಯೇ ವಿಷಯ ತಿಳಿದುಕೊಳ್ಳೋಣ, ಮತ್ತು ಸತ್ಯಾಗ್ರಹಕ್ಕೆ ಅವರ ಬೆಂಬಲವನ್ನೂ ಯಾಚಿಸಿ ಬರೋಣ ಎಂದು ಆತ ಅವರನ್ನು ಕಾಣಲು ಹೋದ. ತಾವು ಯಾಕಾಗಿ ಹಿಂದೆ ಸರಿದೆ ಎನ್ನುವುದನ್ನು ಅವರು ಹೇಳಲಿಲ್ಲ. ಬಲವಾದ, ಅನಿವಾರ್ಯ ಕಾರಣವಿದೆ ಎಂದಷ್ಟೇ ಹೇಳಿದ್ದರು. ಮತ್ತು
’ಕಾರ್ಯ ಸಿದ್ಧಿಯಾದರೆ ಎಲ್ಲರಿಗೂ ಸಮನಾದ ಫಲ; ಒಂದುವೇಳೆ ಕಾರ್ಯ ವಿಪತ್ತಿಯಾದರೆ ಮುಖ್ಯಸ್ಥ ಕೊಲ್ಲಲ್ಪಡುತ್ತಾನೆ..’
ಪ್ರಸಿದ್ಧ ನುಡಿಯಿದೆ. ನೀವು ಜೇನು ಗೂಡಿಗೆ ಕೈ ಹಾಕಿದ್ದೀರಿ. ಅದು ಒಂದೇ ಅಲ್ಲ ದೊಡ್ಡ ಹೊದರೇ ಆಗಿದೆ. ವಿಚಾರ ಮಾಡಿ, ಸರಕಾರದ ವಿರುದ್ಧ ಹೋರಾಟ; ಹಿನ್ನೆಲೆಯಲ್ಲಿ ಭಾರಿ ಭಾರಿ ತಿಮಿಂಗಿಲಗಳೂ ಮೊಸಳೆಗಳೂ ಇವೆ. ಸಮುದ್ರಕ್ಕೆ ಇಳಿದು ಬಿಟ್ಟಿದ್ದೀರಿ, ಸುಮ್ಮನೆ ಸಾಯುವುದರಲ್ಲಿ ಅರ್ಥವಿಲ್ಲ..
ಎಂದೂ ಆಕಾಶದತ್ತ ಮುಖಮಾಡಿ ಏನೋ ಯೋಚಿಸುತ್ತ ಸ್ವಾಮಿ ಚಿದಂಬರೇಶ ಹೇಳಿದಾಗ.. ಅವರು ಹೇಳಿದ್ದರಲ್ಲಿ ವಾಸ್ತವತೆ ಇದ್ದರೂ ಸತ್ಯಾಗ್ರಹಕ್ಕ ಒತ್ತಾಸೆಯಾಗುವ್ಯದರಿಂದ ಹಿಂದೆ ಸರಿದುದರ ಹಿಂದೆ ಏನೊ ಸಂಚು ನಡೆದಿದೆ ಎಂಬ ಅನುಮಾ ನಿಜವಾಯಿತು.. ಅದನ್ನು ತೋರ್ಪಡಿಸಿಕೊಳ್ಳದೆ ಜಯಂತ ಕಾನಿಟಕರ್ ದೃಢತೆಯಿಂದ ಹೇಳಿದ.
’ಏನೇ ಬಂದರೂ ಅದನ್ನು ಸ್ವಾಗತಿಸಲು ದೃಢ ಸಂಕಲ್ಪ ಮಾಡಿದ್ದೇವೆ. ಗೋಲಿಬಾರ್ ಮಾಡ ಬಹುದು, ಕೊಲ್ಲ ಬಹುದು , ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ; ಆಮರಣಾಂತ ಹೋರಾಟ..
’ಅದು ಸರಿ, ಇಲ್ಲಿ ನಿಮ್ಮ ಜೀವದ ಪ್ರಶ್ನೆಯೊಂದೇ ಅಲ್ಲ; ಲಕ್ಷಾಂತರ ಜನ ಸೇರಿರುತ್ತಾರೆ, ಅಮಾಯಕರು, ಹೆಂಗಸರು ತರುಣ ತರುಣಿಯರು..ಅವರಲ್ಲಿ ಅದೆಷ್ಟೊ ಜನ ಪ್ರಾಣ ಕಳೆದುಕೊಳ್ಳ ಬಹುದು..
ಕೊಂಚ ಹೊತ್ತು ನಿಂತು ನಿಟ್ಟುಸಿರು ಬಿಟ್ಟು ಜಯಂತ ಕಾನಿಟ್ಕರ್ ತಲೆಯಾಡಿಸಿ ಹೇಳಿದ : ಹೌದು ಅದೇ ನನಗೆ ಚಿಂತೆಯಾಗಿದೆ..ನಿಷ್ಪಾಪಿ ಜನರ, ಮುಗ್ಧರ ಜೀವ ಹರಣ ಆಗಬಾರದು.. ನೋಡೋಣ ಅವರ ಜೀವಕ್ಕೆ ಅಪಾಯ ಉಂಟಾಗದಂತೆ ಪ್ರತಿಭಟನೆ ಸತ್ಯಾಗ್ರಹ ನಡೆಸೋಣ.. ಎಂದು ತೀರ್ಮಾನಿಸಿದ್ದೇವೆ.. ಆಯಿತು..ನಾವಂತೂ ನಮ್ಮ ಪ್ರಯತ್ನ ಮಾಡುತ್ತೇವೆ ಮುಂದಿನದು ಭವಿಷ್ಯಕ್ಕೆ ಬಿಟ್ಟ ವಿಚಾರ’ ಎಂದು ಜಯಂತ ಹೇಳಿ, ಸ್ವಾಮಿ ಚಿದಂಬರೇಶರ ಅಪ್ಪಣೆ ಪಡೆದು ಜೊತೆಗಾರರೊಂದಿಗೆ ಮರಳಿದ್ದ.